ಬ್ರೇಕಪ್ ಅನ್ನೋದು ಪ್ರೀತಿಯಲ್ಲಿ ಬಿದ್ದ ಜೋಡಿಗಳಿಗೆ ಆಘಾತ ತರುತ್ತದೆ. ಇಲ್ಲೊಬ್ಬಳು ಯುವತಿ ತನಗೆ ಕೈಕೊಟ್ಟ ಪ್ರಿಯಕರನ ವಿರುದ್ಧ ವಿಚಿತ್ರವಾದ ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾಳೆ. ಆಕೆ ಗಲಾಟೆ ಎಬ್ಬಿಸಿಲ್ಲ, ಜಗಳವಾಡಿಲ್ಲ. ಬದಲಾಗಿ ಆ ಮಾಜಿ ಪ್ರೇಮಿಯ ತಂದೆಯನ್ನೇ ಮದುವೆಯಾಗಿದ್ದಾಳೆ.
ಮಾಜಿ ಪ್ರೇಮಿಯ ತಂದೆಯನ್ನು ಮದುವೆಯಾಗಿ ಆಕೆ ಅದೇ ಮನೆಗೆ ಬಂದಿದ್ದಾಳೆ. ಈ ಮೂಲಕ ಆತನ ಪಾಲಿಗೆ ಮಲತಾಯಿಯಾಗಿದ್ದಾಳೆ. ಆತನಿಗೆ ಒಂದಿಲ್ಲೊಂದು ರೀತಿಯಲ್ಲಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾಳೆ. ಈ ಘಟನೆಯ ಬಳಿಕ ಆತನಿಗೂ ಮದುವೆ ನಿಶ್ಚಯವಾಗಿತ್ತು. ಮದುವೆಯ ದಿನ, ವಧು ಮಾತ್ರ ಬಿಳಿ ಬಟ್ಟೆಯನ್ನು ಧರಿಸಬೇಕಾಗಿತ್ತು. ಉಳಿದ ಅತಿಥಿಗಳು ಮತ್ತು ಸಂಬಂಧಿಕರು ಸರಳ ಮತ್ತು ವರ್ಣರಂಜಿತ ಬಟ್ಟೆಗಳನ್ನು ಧರಿಸಬೇಕಾಗಿತ್ತು.
ಆದರೆ ಮಲತಾಯಿ ತನ್ನ ಮಾಜಿ ಗೆಳೆಯನನ್ನು ಚುಡಾಯಿಸಲು ವಿಶಿಷ್ಟವಾದದ್ದನ್ನು ಮಾಡಿದ್ದಾಳೆ. ಅವಳು ಕೂಡ ವಧುವಿನಂತೆಯೇ ಬಿಳಿ ಬಣ್ಣದ ಬಟ್ಟೆ ಧರಿಸಿ ಕುಟುಂಬದ ಪ್ರತಿಯೊಂದು ಫೋಟೋದಲ್ಲಿಯೂ ಕಾಣಿಸಿಕೊಂಡಿದ್ದಾಳೆ. ಈ ಘಟನೆ ನಡೆದಿದ್ದೆಲ್ಲಿ ಅನ್ನೋ ವಿವರ ಲಭ್ಯವಾಗಿಲ್ಲ.
ಚೀನಾ ಒಂದಿಲ್ಲೊಂದು ಹೊಸತನದ ಮೂಲಕ ಸುದ್ದಿ ಮಾಡುತ್ತಲೇ ಇರುತ್ತದೆ. ಇದೀಗ ಚೀನಾದ ರೈಲು ನಿಲ್ದಾಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ. ವಿಶೇಷವೆಂದರೆ ಈ ರೈಲು ನಿಲ್ದಾಣ ಸ್ಯಾನಿಟರಿ ಪ್ಯಾಡ್ನ ಆಕಾರದಲ್ಲಿದೆ. ಆದರೆ ಇದರ ಹಿಂದಿನ ಕಾರಣ ಬೇರೆಯೇ ಇದೆ ಎನ್ನುತ್ತಾರೆ ಅನೇಕರು.
ಚೀನಾದ ನಾನ್ಜಿಂಗ್ ನಾರ್ತ್ನಲ್ಲಿ ಇತ್ತೀಚೆಗೆ ಈ ರೈಲ್ವೆ ನಿಲ್ದಾಣವನ್ನು ನಿರ್ಮಿಸಲಾಗಿದೆ. ಇದು ಸ್ಯಾನಿಟರಿ ಪ್ಯಾಡ್ನಂತೆ ಕಂಡರೂ ಅಸಲಿಗೆ ಈ ನಿಲ್ದಾಣವನ್ನು ಪ್ಲಮ್ ಹೂವಿನಂತೆ ವಿನ್ಯಾಸಗೊಳಿಸಲಾಗಿದೆಯಂತೆ. ಆದರೆ ಕೆಲವರು ಇದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದ್ದಾರೆ.
ಈ ರೈಲು ನಿಲ್ದಾಣದ ಆಕಾರ ಪ್ಲಮ್ ಹೂವುಗಳಿಂದ ಪ್ರೇರಣೆ ಪಡೆದು ವಿನ್ಯಾಸ ಮಾಡಲಾಗಿದೆ. ಆದರೆ ಪ್ಲಮ್ ಹೂವುಗಳು ಐದು ದಳಗಳನ್ನು ಹೊಂದಿರುತ್ತವೆ, ನಾಲ್ಕು ದಳಗಳನ್ನು ಹೊಂದಿರುವುದಿಲ್ಲ ಎಂಬುದು ಹಲವರ ವಾದ. ಹಾಗಾಗಿ ಇದು ಪ್ಲಮ್ ಹೂವುಗಳಿಂದ ಸ್ಫೂರ್ತಿ ಪಡೆದಿದೆ ಎಂಬುದನ್ನು ಜನರಿಗೆ ನಂಬಲು ಸಾಧ್ಯವಾಗುತ್ತಿಲ್ಲ.
ರೈಲು ನಿಲ್ದಾಣದ ಆಕಾರದ ಚರ್ಚೆಯ ಭರದಲ್ಲಿ ಪೀರಿಯಡ್ ಶೇಮಿಂಗ್ ಬೇಡ ಎಂಬ ಮಾತುಗಳು ಕೂಡ ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ರೈಲು ನಿಲ್ದಾಣದ ಆಕಾರ ಹೇಗೇ ಇರಲಿ, ಅಲ್ಲಿ ಎಲ್ಲಾ ಸೌಲಭ್ಯ ಮತ್ತು ಸ್ವಚ್ಛತೆ ಮುಖ್ಯ ಎನ್ನುತ್ತಿದ್ದಾರೆ ನೆಟ್ಟಿಗರು.
ನಿದ್ದೆಯಲ್ಲಿ ಕೆಟ್ಟ ಕನಸು ಬೀಳುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತದೆ, ಆದರೆ ದೇಹವನ್ನು ಚಲಿಸಲು ಸಾಧ್ಯವಾಗುವುದಿಲ್ಲ. ಎದೆಯ ಮೇಲೆ ಯಾರೋ ಕುಳಿತಂತೆ, ಭಾರವಾದ ವಸ್ತುವನ್ನು ಇರಿಸಿದಂತೆ ಭಾಸವಾಗುತ್ತದೆ. ಕಿರುಚಲು ಅಥವಾ ಕೂಗಲು ಬಯಸಿದರೂ ಧ್ವನಿ ಹೊರಬರುವುದೇ ಇಲ್ಲ. ನಾವು ಎಲ್ಲವನ್ನೂ ನೋಡುತ್ತೇವೆ, ಆತಂಕವನ್ನು ಅನುಭವಿಸುತ್ತೇವೆ. ಆದರೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ಇದು “ಸ್ಲೀಪ್ ಪ್ಯಾರಾಲಿಸಿಸ್” ಎಂಬ ಕಾಯಿಲೆ.
ವ್ಯಕ್ತಿ ನಿದ್ರೆ ಮತ್ತು ಎಚ್ಚರದ ನಡುವಿನ ಪರಿವರ್ತನೆಯ ಹಂತದಲ್ಲಿದ್ದಾಗ ನಿದ್ರಾ ಪಾರ್ಶ್ವವಾಯು ಸಂಭವಿಸುತ್ತದೆ. ಹೆಚ್ಚು ಸರಳವಾಗಿ ಹೇಳುವುದಾದರೆ, ಹಸಿ ನಿದ್ರೆಯಲ್ಲಿರುವಾಗ ಅಂದರೆ ತುಂಬಾ ಆಳವಾದ ನಿದ್ದೆ ಬರುವ ಮುನ್ನ ಇದು ಸಂಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ಮನಸ್ಸು ಎಚ್ಚರವಾಗಿರುತ್ತದೆ, ದೇಹವು ಇನ್ನೂ ನಿದ್ರಿಸುತ್ತಿರುತ್ತದೆ. ಈ ಸಮಯದಲ್ಲಿ ಸುತ್ತಲಿನ ಶಬ್ದಗಳನ್ನು ಕೇಳಬಹುದು ಮತ್ತು ನೋಡಬಹುದು, ಆದರೆ ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗುವುದಿಲ್ಲ. ಈ ಪರಿಸ್ಥಿತಿಯು ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳವರೆಗೆ ಇರುತ್ತದೆ. ಸಾಕಷ್ಟು ಭಯಾನಕವೆನಿಸುತ್ತದೆ.
ಸ್ಲೀಪ್ ಪ್ಯಾರಾಲಿಸಿಸ್ ಲಕ್ಷಣಗಳು…
ಇದರ ಕೆಲವು ಲಕ್ಷಣಗಳು ತುಂಬಾ ಸಾಮಾನ್ಯವಾಗಿವೆ. ಮಲಗಿರುವಾಗ ಇದ್ದಕ್ಕಿದ್ದಂತೆ ಎಚ್ಚರಗೊಳ್ಳುವುದು ಮತ್ತು ದೇಹವನ್ನು ಚಲಿಸಲು ಸಾಧ್ಯವಾಗದಿರುವುದು, ಉಸಿರಾಟದ ತೊಂದರೆ, ಉಸಿರುಗಟ್ಟುವಿಕೆ, ಎದೆಯ ಮೇಲೆ ಒತ್ತಡವನ್ನು ಅನುಭವಿಸುವುದು ಹೆದರಿಕೆ, ವಿಚಿತ್ರ ಶಬ್ದಗಳನ್ನು ಕೇಳುವುದು ಇತ್ಯಾದಿ.
ನಿದ್ರಾ ಪಾರ್ಶ್ವವಾಯುವಿಗೆ ಕಾರಣಗಳು…
ಸಾಮಾನ್ಯವಾಗಿ ನಿದ್ರೆಯ ಕೊರತೆ, ಮಾನಸಿಕ ಒತ್ತಡ, ದುರ್ಬಲ ಸ್ಲೀಪ್ ಸೈಕಲ್, ಮಾನಸಿಕ ಅಸ್ವಸ್ಥತೆ ಅಥವಾ ಕೆಲವು ಔಷಧಿಗಳ ಅಡ್ಡ ಪರಿಣಾಮದಿಂದ ಇದು ಉಂಟಾಗುತ್ತದೆ.
ಇದನ್ನು ಸಂಪೂರ್ಣವಾಗಿ ತಡೆಯುವುದು ಸ್ವಲ್ಪ ಕಷ್ಟ. ಆದರೆ ಕೆಲವು ಸಲಹೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅಪಾಯವನ್ನು ಕಡಿಮೆ ಮಾಡಬಹುದು. ಈ ಸಮಸ್ಯೆಯಿಂದ ಪಾರಾಗಲಯ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ನಿಯಮಿತ ವ್ಯಾಯಾಮ ಮಾಡಬೇಕು. ಮಲಗುವ ಮತ್ತು ಏಳುವ ಸಮಯವನ್ನು ನಿಗದಿಪಡಿಸಿ. ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ. ಮಲಗುವ ಮುನ್ನ ಪ್ರತಿದಿನ ಯೋಗ ಮಾಡಿ.
ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಬಗ್ಗೆ ದೆಹಲಿಯ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ಮಧುಮೇಹದಿಂದ ಬಳಲುತ್ತಿರುವ ಕೇಜ್ರಿವಾಲ್, ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆಗೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಕೇಜ್ರಿವಾಲ್, ಜೈಲಿನಲ್ಲಿ ಮಾವಿನಹಣ್ಣು ತಿನ್ನುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ. ಆದರೆ ಕೇಜ್ರಿವಾಲ್ ಪದೇ ಪದೇ ಮನವಿ ಮಾಡಿದರೂ ಅವರಿಗೆ ಇನ್ಸುಲಿನ್ ನೀಡುತ್ತಿಲ್ಲ, ಅವರ ಶುಗರ್ ಪ್ರಮಾಣ ಹೆಚ್ಚುತ್ತಿದೆ ಅನ್ನೋದು ಆಮ್ ಆದ್ಮಿ ಪಕ್ಷದ ಆರೋಪ.
ಈ ವಿವಾದ ಮಧುಮೇಹ ರೋಗಿಗಳು ಮಾವಿನ ಹಣ್ಣನ್ನು ತಿನ್ನಬೇಕೇ ಬೇಡವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮಾವಿನ ಹಣ್ಣು ಸೇವನೆಯ ಸಂದರ್ಭದಲ್ಲಿ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನೆಲ್ಲ ನೋಡೋಣ.
ಮಾವು ಮತ್ತು ಮಧುಮೇಹ: ತಜ್ಞರು ಹೇಳುವುದೇನು?
ಮಾವಿನ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಕ್ಕರೆ (ಫ್ರಕ್ಟೋಸ್) ಇರುತ್ತದೆ. ಮಾವು ಸಿಹಿಯಾಗಿರುತ್ತದೆ ಮತ್ತು ಬಹಳಷ್ಟು ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಆದ್ದರಿಂದ ಮಧುಮೇಹ ರೋಗಿಗಳು ಮಾವಿನಹಣ್ಣುಗಳನ್ನು ಸೀಮಿತ ಪ್ರಮಾಣದಲ್ಲಿ ತಿನ್ನಬೇಕು. ರಕ್ತದಲ್ಲಿನ ಸಕ್ಕರೆಯ ಮಟ್ಟವು ಯಾವಾಗಲೂ ಹೆಚ್ಚಿದ್ದರೆ ಅಂಥವರು ಮಾವಿನಹಣ್ಣು ತಿನ್ನಬಾರದು. ಮಾವು ಸೇವನೆಯ ಪ್ರಮಾಣವು ರೋಗಿಯ ಮಧುಮೇಹ ನಿಯಂತ್ರಣ, ಔಷಧಿಗಳು ಮತ್ತು ಚಟುವಟಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ.
ಮಧುಮೇಹ ರೋಗಿಯು ಒಂದು ಚಿಕ್ಕ ಹಣ್ಣು ಅಂದರೆ ಸುಮಾರು 100 ಗ್ರಾಂಗಿಂತ ಹೆಚ್ಚು ಮಾವಿನ ಹಣ್ಣನ್ನು ತಿನ್ನಬಾರದು. ಅಲ್ಲದೆ ಮಾವಿನ ಹಣ್ಣನ್ನು ಸರಿಯಾದ ಸಮಯದಲ್ಲಿ ತಿನ್ನುವುದು ಮುಖ್ಯ. ಇದನ್ನು ಬೆಳಗಿನ ಉಪಾಹಾರದೊಂದಿಗೆ ಅಥವಾ ಸ್ವಲ್ಪ ಹಣ್ಣುಗಳೊಂದಿಗೆ ಸೇವಿಸುವುದು ಉತ್ತಮ.
ಮಧುಮೇಹ ರೋಗಿಗಳಿಗೆ ಮಾವು ಪ್ರಯೋಜನಕಾರಿಯಾಗಿದೆ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ತ್ವರಿತವಾಗಿ ಹೆಚ್ಚಾಗುತ್ತದೆ. ಇದು ಆಯಾಸ, ಬಾಯಾರಿಕೆ, ಪದೇ ಪದೇ ಮೂತ್ರ ವಿಸರ್ಜನೆ ಮತ್ತು ದೃಷ್ಟಿ ಮಂದವಾಗುವುದು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.
ಅತಿಯಾಗಿ ಸಿಹಿ ಪದಾರ್ಥಗಳನ್ನು ಸೇವಿಸಿದಾಗ, ಸರಿಯಾಗಿ ಬ್ರಷ್ ಮಾಡದಿದ್ದಾಗ ಹಲ್ಲು ಹುಳುಕಾಗುತ್ತವೆ. ಇದರಿಂದ ಕೆಲವೊಮ್ಮೆ ಹಲ್ಲಿನಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.
*ರಾತ್ರಿ ಮಲಗುವ ಮೊದಲು ಸಾಸಿವೆ ಎಣ್ಣೆ, ಅರಶಿನ, ಉಪ್ಪನ್ನು ಬೆರೆಸಿ ಹಲ್ಲುಜ್ಜಿ. ಇದರಿಂದ ಹುಲ್ಲುಗಳು ಸ್ವಚ್ಚವಾಗುತ್ತವೆ.
*ಹುಳುಕುಗಳಿಂದ ಪಾರಾಗಲು ಫ್ಲೋರೈಡ್ ಟೂತ್ ಪೇಸ್ಟ್ ಆಯ್ಕೆ ಮಾಡಿ. ಇದರಿಂದ ಪ್ರತಿದಿನ 2 ಬಾರಿ ಬ್ರಷ್ ಮಾಡಿ. ಇದು ಹಲ್ಲುಗಳಲ್ಲಿ ರಕ್ಷಣಾ ಪದರಗಳನ್ನು ಹೆಚ್ಚಿಸಿ ಹುಳುಕು ಹಿಡಿಯುವುದನ್ನು ತಡೆಯುತ್ತದೆ.
ವಯಸ್ಸು ಇಪ್ಪತೈದು, ಮೂವತ್ತು ದಾಟುವ ಮೊದಲೇ ಬೆನ್ನು ನೋವು, ಸೊಂಟ ನೋವು ಮತ್ತು ಮೈ ಕೈ ನೋವು ಮೊದಲಾದ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಇದಕ್ಕೆ ಕಾರಣ ನಮ್ಮ ಜೀವನ ಶೈಲಿ ಮತ್ತು ಅರೋಗ್ಯದ ಕ್ರಮಗಳು.
ಟೀ ಮತ್ತು ಕಾಫಿ ಬದಲು ಹಾಲನ್ನು ಕುಡಿದರೆ ಮೂಳೆಗಳು ಸದೃಢವಾಗುತ್ತದೆ. ಹಾಲಿಗೆ ಯಾವುದೇ ರೀತಿಯ ಸಕ್ಕರೆ ಅಂಶವನ್ನು ಬಳಸಬಾರದು. ಶುದ್ಧವಾದ ಹಾಲು ಕುಡಿಯಬೇಕು.
ಒಣಗಿದ ಖರ್ಜೂರವನ್ನು ತಿನ್ನುವುದರಿಂದ ಮೂಳೆಗಳನ್ನು ಗಟ್ಟಿ ಮುಟ್ಟಾಗಿರುತ್ತವೆ. ಇದರಲ್ಲಿ ರಂಜಕ, ಪೊಟ್ಯಾಷಿಯಂ, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಷಿಯಂ ಇದ್ದು ನಮ್ಮ ಮೂಳೆಗಳನ್ನು ಮತ್ತು ಹಲ್ಲುಗಳನ್ನು ಬಲಪಡಿಸುತ್ತವೆ.
ಹಸಿರು ಬಣ್ಣದ ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯವನ್ನು ಸುಧಾರಿಸಬಹುದು. ಗಾಢ ಹಸಿರು ಬಣ್ಣದ ತರಕಾರಿಗಳಲ್ಲಿ ವಿಟಮಿನ್ ಡಿ ಅಂಶ ಇರುವುದರಿಂದ ಇವುಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇವನೆ ಮಾಡುವುದರಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಹಾಗೇ ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಅದರಿಂದ ಪ್ರಯೋಜನ ಪಡೆಯಬಹುದು. ಹಾಗಾಗಿ ಹಣ್ಣುಗಳನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಿ.
*ಹಣ್ಣುಗಳನ್ನು ಸೇವಿಸುವಾಗ ತರಕಾರಿಗಳನ್ನು ಅಥವಾ ಬೇರೆ ಯಾವ ವಸ್ತುಗಳನ್ನು ಸೇವಿಸಬೇಡಿ. ಇದರಿಂದ ಅದರ ಪೌಷ್ಟಿಕತೆ ನಿಮಗೆ ಸಿಗುವುದಿಲ್ಲ.
*ಹಣ್ಣುಗಳನ್ನು ಬೇರೆ ಹಣ್ಣುಗಳ ಜೊತೆಗೆ ಮಿಕ್ಸ್ ಮಾಡಿ ಸೇವಿಬೇಡಿ. ಇದರಿಂದ ಆರೋಗ್ಯ ಕೆಡುತ್ತದೆ. ಅಜೀರ್ಣ ಸಮಸ್ಯೆ ಕಾಡುತ್ತದೆ.
*ಸಿಟ್ರಸ್ ಹಣ್ಣುಗಳ ಜೊತೆಗೆ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ ಹಣ್ಣುಗಳ ಜೊತೆಗೆ ಹಾಲನ್ನು ಕುಡಿಯಬೇಡಿ.
*ಸಾಧ್ಯವಾದಷ್ಟು ತಾಜಾ ಹಣ್ಣುಗಳನ್ನು ತಿನ್ನಿ. ಇದರಿಂದ ಹಣ್ಣುಗಳು ಬಹಳ ಬೇಗ ಜೀರ್ಣವಾಗುತ್ತದೆ. ಮತ್ತು ಇದರಿಂದ ಶೀತದ ಸಮಸ್ಯೆ ಕಾಡುವುದಿಲ್ಲ.
ಬೇಸಿಗೆಯಲ್ಲಿ ಎಲ್ಲರೂ ಸೆಖೆಯಿಂದ ಕಂಗಾಲಾಗ್ತಾರೆ. ಬಾಯಾರಿಕೆ, ಸುಡು ಬಿಸಿಲು ಜೊತೆಗೆ ದೇಹದಲ್ಲಿ ಉಷ್ಣತೆಯ ಹೆಚ್ಚಳ ಅನಾರೋಗ್ಯಕ್ಕೂ ಕಾರಣವಾಗಬಹುದು. ಹಾಗಾಗಿ ದೇಹವನ್ನು ಆದಷ್ಟು ತಂಪಾಗಿಟ್ಟುಕೊಳ್ಳಬೇಕು.
ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಸಾಕಷ್ಟು ನೀರು ಕುಡಿಯಬೇಕು. ಅಷ್ಟೇ ಅಲ್ಲ ಬೇಸಿಗೆಯಲ್ಲಿ ಸೋಂಪಿನ ಪಾನಕ ಅಥವಾ ಸಿರಪ್ ನಮ್ಮ ದೇಹಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಇದು ನೀರಿನ ಕೊರತೆಯನ್ನು ನಿವಾರಿಸುತ್ತದೆ.
ಇದರಲ್ಲಿರುವ ಪೋಷಕಾಂಶಗಳು ನಮ್ಮ ದೇಹದಲ್ಲಿರುವ ಕೊಳೆಯನ್ನು ಹೊರಹಾಕಲು ಸಹಾಯ ಮಾಡುತ್ತವೆ. ಫೆನ್ನೆಲ್ ದೇಹದ ನಿರ್ವಿಶೀಕರಣದಲ್ಲಿ ಸಹ ಪ್ರಯೋಜನಕಾರಿಯಾಗಿದೆ.
ಫಾಸ್ಫರಸ್, ಸೆಲೆನಿಯಮ್, ಸತು, ಮ್ಯಾಂಗನೀಸ್, ಕೋಲೀನ್, ಬೀಟಾ-ಕ್ಯಾರೋಟಿನ್ ಮತ್ತು ಇತರ ಅನೇಕ ಅಂಶಗಳು ಫೆನ್ನೆಲ್ನಲ್ಲಿ ಕಂಡುಬರುತ್ತವೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹವನ್ನು ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಮೂತ್ರಪಿಂಡ ಮತ್ತು ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ.
ದೇಹದಲ್ಲಿ ಊತದ ಸಮಸ್ಯೆ ಇದ್ದರೂ ಅದನ್ನು ಗುಣಪಡಿಸಲು ಸೋಂಪು ಸಹಕಾರಿಯಾಗಿದೆ. ಇದು ತೂಕವನ್ನು ಕಡಿಮೆ ಮಾಡಿ ನಮ್ಮನ್ನು ಫಿಟ್ ಆಗಿಡುತ್ತದೆ. ಮುಖದ ಹೊಳಪನ್ನು ಹೆಚ್ಚಿಸಲು ಪ್ರತಿದಿನ 1 ಗ್ಲಾಸ್ ಸೋಂಪಿನ ಪಾನೀಯ ಸೇವಿಸಬೇಕು.
ಫೆನ್ನೆಲ್ ಕಷಾಯವನ್ನು ಸೇವಿಸುವುದರಿಂದ ರಕ್ತವೂ ಶುದ್ಧವಾಗುತ್ತದೆ. ಹೊಟ್ಟೆಯ ಸ್ನಾಯುಗಳನ್ನು ಶಾಂತಗೊಳಿಸುವ ಇದು ದೇಹವನ್ನು ಒಳಗಿನಿಂದ ಶುದ್ಧಗೊಳಿಸುತ್ತದೆ. ಸೋಂಪಿನ ಪಾನೀಯ ಅಥವಾ ಕಷಾಯ ಮಾಡುವುದು ಕೂಡ ಸುಲಭ. ಸ್ವಲ್ಪ ಸೋಂಪನ್ನು ಚೆನ್ನಾಗಿ ಜಜ್ಜಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿಯಬಹುದು.
ಹಬ್ಬ- ಹರಿದಿನಗಳಂದು ಸ್ನೇಹಿತರು, ಬಂಧುಗಳು ಸೇರಿದಾಗ ಕೊಂಚ ಹೆಚ್ಚಾಗಿಯೇ ಊಟ ಮಾಡುತ್ತೇವೆ. ಈ ವೇಳೆ ಸಿಹಿ ತಿನಿಸುಗಳು, ಕರಿದ ಪದಾರ್ಥಗಳ ಸೇವನೆಯಿಂದ ಅಜೀರ್ಣವಾಗಿಬಿಡುತ್ತದೆ.
ಹೀಗೆ ಅಜೀರ್ಣವಾದಾಗ ವೀಳ್ಯೆದೆಲೆಯನ್ನು ಟ್ರೈ ಮಾಡಿ ನೋಡಿ. ಎಳೆಯ ವೀಳ್ಯದೆಲೆಯನ್ನು ಚೆನ್ನಾಗಿ ಅಗಿದು ನುಂಗಿ. ವೀಳ್ಯದೆಲೆಯ ರಸವು ಜೀರ್ಣ ಕ್ರಿಯೆಯನ್ನು ಉತ್ತಮಗೊಳಿಸುವುದರಿಂದ ಹೊಟ್ಟೆಯುಬ್ಬರ, ಹೊಟ್ಟೆಯುರಿ ಮೊದಲಾದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಹುಳಿತೇಗು, ಹೊಟ್ಟೆಯಲ್ಲಿ ಉರಿ, ಹೊಟ್ಟೆನೋವು, ಮೊದಲಾದ ಸಮಸ್ಯೆಗಳಿಗೆ ತುಳಸಿ ಎಲೆ, ಪುದೀನಾ, ಕರಿಬೇವು ಪರಿಣಾಮಕಾರಿಯಾಗಿರುವುದರಿಂದ ನಮ್ಮ ಹಿತ್ತಲಲ್ಲಿ ದೊರೆಯುವ ಎಲೆಗಳಿಂದ ಅಜೀರ್ಣವನ್ನು ದೂರ ಮಾಡಬಹುದಾಗಿದೆ.
ಮೊಸರು ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ರಾಸಾಯನಿಕ ಹಾಲಿಗಿಂತ ಮೊದಲು ಜೀರ್ಣವಾಗುವ ಶಕ್ತಿ ಹೊಂದಿದೆ. ಅದಕ್ಕೆ ಎಲ್ಲ ಬಗೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಬನ್ನಿ ಹಾಗಾದ್ರೆ ಮೊಸರಿನ ಉಪಯೋಗಗಳೇನು ಎಂಬುದನ್ನು ತಿಳಿಯೋಣ.
ಪಚನ ಶಕ್ತಿ : ಮೊಸರು ರಕ್ತಸ್ರಾವವನ್ನು ಕಡಿಮೆ ಮಾಡುವ ಗುಣ ಹೊಂದಿದೆ. ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ.
ಹಾಲು ಮೊಸರಿನ ರೂಪ ಪಡೆದಾಗ ಅದರಲ್ಲಿರುವ ಸಕ್ಕರೆ ಆಮ್ಲ ರೂಪ ಪಡೆಯುತ್ತದೆ. ಇದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ಯಾರಿಗೆ ಕಡಿಮೆ ಹಸಿವಾಗುತ್ತದೆಯೋ ಅವರು ಮೊಸರು ಸೇವಿಸುವುದು ಒಳ್ಳೆಯದು.
ಹೊಟ್ಟೆಯ ಶಾಖ : ಮೊಸರನ್ನು ಮಜ್ಜಿಗೆ ಮಾಡಿ ಅಥವಾ ಲಸ್ಸಿ ಮಾಡಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಶಾಖ ಕಡಿಮೆಯಾಗುತ್ತದೆ. ಹೊಟ್ಟೆ ನೋಯುತ್ತಿದ್ದು, ಅನೇಕ ಬಾರಿ ಶೌಚಾಲಯಕ್ಕೆ ಹೋಗಬೇಕೆನಿಸಿದರೆ ಮೊಸರಿಗೆ ಇಸಬ್ ಗೋಲ್ ಹಾಕಿ ಕುಡಿಯಬೇಕು. ಮೊಸರಿನ ಜೊತೆ ಅಕ್ಕಿ ಸೇರಿಸಿ ತಿನ್ನುವುದರಿಂದಲೂ ಅತಿಸಾರ ಕಡಿಮೆಯಾಗುತ್ತದೆ. ಹೊಟ್ಟೆಯ ಇತರ ಖಾಯಿಲೆಗಳಿಗೂ ಮಜ್ಜಿಗೆ ಜೊತೆ ಉಪ್ಪು ಸೇರಿಸಿ ಕುಡಿಯುವುದು ಒಳ್ಳೆಯದು.
ಹೃದಯ ಖಾಯಿಲೆ : ಮೊಸರು ಸೇವಿಸುವುದರಿಂದ ಹೃದಯ ಸಂಬಂಧಿ ಖಾಯಿಲೆ ಗುಣವಾಗುತ್ತದೆ. ರಕ್ತದೊತ್ತಡ, ಮೂತ್ರಪಿಂಡ ಖಾಯಿಲೆಗಳನ್ನು ಹೋಗಲಾಡಿಸುವ ಶಕ್ತಿ ಮೊಸರಿಗಿದೆ. ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯುವುದಲ್ಲದೇ, ಹೃದಯ ಬಡಿತವನ್ನು ನಿಯಂತ್ರಿಸುತ್ತದೆ.
ಮೂಳೆಗಳನ್ನು ಗಟ್ಟಿಮಾಡುವ ಗುಣ : ಮೊಸರಿನಲ್ಲಿ ಹೆಚ್ಚಿಗೆ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಸ್ನಾಯುಗಳು ಸರಿಯಾಗಿ ಕೆಲಸ ಮಾಡುತ್ತವೆ.
ಕೀಲು ನೋವು : ಇಂಗಿನ ಜೊತೆ ಮಜ್ಜಿಗೆ ಬೆರೆಸಿ ಕುಡಿಯುವುದರಿಂದ ಕೀಲು ನೋವು ನಿಯಂತ್ರಣಕ್ಕೆ ಬರುತ್ತದೆ. ಇದರ ಜೊತೆಗೆ ಪೌಷ್ಠಿಕಾಂಶ ನಮ್ಮ ದೇಹ ಸೇರುತ್ತದೆ.
ಮೂಲವ್ಯಾಧಿ : ಮೂಲವ್ಯಾಧಿಯಿಂದ ಬಳಲುವವರು ಊಟದ ನಂತರ ಪಾರ್ಸ್ಲಿ ಜೊತೆ ಮಜ್ಜಿಗೆ ಸೇವಿಸಿದರೆ ಒಳ್ಳೆಯದು.
ತುಪ್ಪದಿಂದ ದಪ್ಪವಾಗುವುದಿಲ್ಲ ಎಂಬುದನ್ನು ಹಲವು ಸಂಶೋಧನೆಗಳು ಹಲವು ರೀತಿಯಲ್ಲಿ ದೃಢಪಡಿಸಿವೆ. ಈಗ ಅದನ್ನು ಹೇಗೆ ಮತ್ತು ಎಷ್ಟು ಸೇವಿಸಬೇಕು ಎಂಬುದರ ಕುರಿತು ತಿಳಿಯೋಣ.
ತುಪ್ಪದಲ್ಲಿ ಉತ್ತಮ ಪ್ರಮಾಣದ ಕ್ಯಾಲರಿ, ಫ್ಯಾಟ್, ಸಾಚುರೇಟೆಡ್ ಫ್ಯಾಟ್, ವಿಟಮಿನ್ ಗಳಿವೆ. ಇವು ತ್ವಚೆಯ ಆರೈಕೆಗೆ ಬಲೂಪಕಾರಿ. ಹೃದಯವನ್ನು ರಕ್ಷಿಸುತ್ತದೆ.
ತುಪ್ಪ ಸೇವಿಸುವುದರಿಂದ ದೇಹದಲ್ಲಿ ಅನಗತ್ಯ ಬೊಜ್ಜು ಬೆಳೆಯುವುದಿಲ್ಲ. ಹಸುವಿನ ತುಪ್ಪದಲ್ಲಿ ಕೊಲೆಸ್ಟ್ರಾಲ್ ಇಲ್ಲ ಹಾಗಾಗಿ ದೇಸಿ ತುಪ್ಪ ತಿಂದರೆ ಬೊಜ್ಜಿನ ಸಮಸ್ಯೆ ಕಾಡಲ್ಲ.
ಇದರಲ್ಲಿ ವಿಟಮಿನ್ ಅಂಶ ಸಾಕಷ್ಟಿದ್ದು ಮೂಳೆಗಳು ಬಲಿಷ್ಠಗೊಳ್ಳುತ್ತವೆ. ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಮತ್ತು ವಿಟಮಿನ್ ಪ್ರಮಾಣ ಸಾಕಷ್ಟಿದ್ದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ.
ಕೂದಲಿನ ಆರೈಕೆ ಮಾಡುತ್ತದೆ. ಒಣ ಕೂದಲಿನ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ. ಒಂದು ಚಮಚ ತುಪ್ಪವನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಅತ್ಯುತ್ತಮವಾಗಿರುತ್ತದೆ.
ನೀವು ನಕ್ಕಾಗ ನಿಮ್ಮ ಸೌಂದರ್ಯವನ್ನು ದುಪ್ಪಟ್ಟುಗೊಳಿಸುವುದು ಹಲ್ಲುಗಳು. ಅವುಗಳೇ ಹಳದಿಗಟ್ಟಿ ನಿಮ್ಮ ಸೌಂದರ್ಯಕ್ಕೆ ಭಂಗ ತರುತ್ತಿವೆಯೇ. ಹಾಗಿದ್ದರೆ ಅದನ್ನು ಸರಿಪಡಿಸುವುದು ಹೇಗೆ?
ಒಂದು ಚಮಚ ತೆಂಗಿನೆಣ್ಣೆಯನ್ನು ತೆಗೆದುಕೊಳ್ಳಿ. ಬೆರಳಿನ ಸಹಾಯದಿಂದ ಇದನ್ನು ನಿಮ್ಮಹಲ್ಲುಗಳ ಮೇಲೆ ಮಸಾಜ್ ಮಾಡಿ. ಹಲ್ಲಿನೊಂದಿಗೆ ವಸಡನ್ನೂ ತಿಕ್ಕಿ. ಹತ್ತು ನಿಮಿಷದ ಬಳಿಕ ಬಾಯಿ ಮುಕ್ಕಳಿಸಿ. ನಿತ್ಯ ಹೀಗೆ ಮಾಡುವುದರಿಂದ ಹಳದಿ ಹಲ್ಲಿನ ಸಮಸ್ಯೆ ದೂರವಾಗುತ್ತದೆ.
ಬೇಕಿಂಗ್ ಸೋಡಾ ನಿಮ್ಮ ಹಲ್ಲಿನ ಮೇಲಿನ ಕಲೆಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಬೇಕಿಂಗ್ ಸೋಡಾಗೆ ನಾಲ್ಕು ಹನಿ ನೀರು ಹಾಕಿ ಕರಗಿಸಿ ಪೇಸ್ಟ್ ತಯಾರಿಸಿ. ಇದನ್ನು ಬ್ರೆಶ್ ಸಹಾಯದಿಂದ ಹಲ್ಲಿನ ಮೇಲೆ ಉಜ್ಜಿ. ಇದರಿಂದಲೂ ಹಲ್ಲಿನ ಸಮಸ್ಯೆ ದೂರವಾಗುತ್ತದೆ.
ಬಾಳೆಹಣ್ಣು ಅಥವಾ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಸಿಟ್ರಿಕ್ ಆಸಿಡ್ ಇದ್ದು ಇದು ನಿಮ್ಮ ಹಳದಿಗಟ್ಟಿದ ಹಲ್ಲುಗಳನ್ನು ಬೆಳ್ಳಗಾಗಿಸುತ್ತದೆ. ಇದರ ಸಿಪ್ಪೆಯನ್ನು ನಿಮ್ಮ ಹಲ್ಲುಗಳ ಮೇಲೆ ನಯವಾಗಿ ಸ್ಕ್ರಬ್ ಮಾಡಿ. ಬಳಿಕ ಬಾಯಿಯನ್ನು ತೊಳೆಯಿರಿ. ಇದನ್ನು ನಿತ್ಯ ಪ್ರಯತ್ನಿಸುವುದು ಒಳ್ಳೆಯದೇ.
ಸೌತೆಕಾಯಿಯಲ್ಲಿ ದೇಹಕ್ಕೆ ಬೇಕಾಗುವ ಒಳ್ಳೆಯ ಪೋಷಕಾಂಶಗಳು ಹೇರಳವಾಗಿದೆ. ಇದನ್ನು ಆಹಾರ ಪದಾರ್ಥಗಳಲ್ಲಷ್ಟೇ ಅಲ್ಲದೇ ಫೇಸ್ ಪ್ಯಾಕ್ ಗಳಲ್ಲಿಯೂ ಬಳಕೆ ಮಾಡಲಾಗುತ್ತದೆ.
ಸೌತೆಕಾಯಿಯಿಂದ ಸಲಾಡ್, ಸಾರು, ಜ್ಯೂಸ್ ಹೀಗೆ ಅನೇಕ ಭಕ್ಷ್ಯಗಳನ್ನು ತಯಾರಿಸುವುದಲ್ಲದೇ ಸ್ಯಾಂಡ್ ವಿಚ್ ಸಹ ಮಾಡಿ ಸವಿಯಬಹುದು. ಅದು ಹೇಗೆ ಅಂತಾ ನೀವೂ ಒಮ್ಮೆ ಟ್ರೈ ಮಾಡಿ ನೋಡಿ.
ಬೇಕಾಗುವ ಸಾಮಾಗ್ರಿಗಳು
ಬ್ರೆಡ್ ತುಂಡು 4 ರಿಂದ 6
ಸೌತೆಕಾಯಿ 1
ಚೀಸ್ ಸ್ವಲ್ಪ
ಬೆಣ್ಣೆ 2 ಚಮಚ
ಕರಿ ಮೆಣಸಿನ ಪುಡಿ ಚಿಟಿಕೆಯಷ್ಟು
ಚಾಟ್ ಮಸಾಲಾ ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಮೊದಲು ಸೌತೆಕಾಯಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿಕೊಳ್ಳಬೇಕು.
ನಂತರ ಬ್ರೆಡ್ನ ತುದಿಯನ್ನು ಕತ್ತರಿಸಿ, ಅದಕ್ಕೆ ಬೆಣ್ಣೆಯನ್ನು ಸವರಬೇಕು. ನಂತರ ಚೀಸ್, ಸೌತೆಕಾಯಿ, ಕರಿ ಮೆಣಸಿನ ಪುಡಿ, ಉಪ್ಪು, ಚಾಟ್ ಮಸಾಲಾ ಪುಡಿಯನ್ನು ಹಾಕಿ ಇನ್ನೊಂದು ಬ್ರೆಡ್ ನಿಂದ ಕವರ್ ಮಾಡಬೇಕು.
ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಬೆಣ್ಣೆ ಸವರಿ ಅದರ ಮೇಲೆ ಈ ಎಲ್ಲಾ ಮಿಶ್ರಣ ಮಾಡಿದ ಬ್ರೆಡ್ ಇಟ್ಟು ಎರಡೂ ಬದಿ ರೋಸ್ಟ್ ಮಾಡಿದರೆ ಸೌತೆಕಾಯಿಯ ಸ್ಯಾಂಡ್ ವಿಚ್ ಸವಿಯಲು ಸಿದ್ಧ.
ಸ್ತನ ಕ್ಯಾನ್ಸರ್ನಿಂದ ಬಳಲುತ್ತಿರುವ ಇಬ್ಬರು ಮಹಿಳೆಯರಿಗೆ ದೇಶದಲ್ಲೇ ಪ್ರಥಮ ಬಾರಿಗೆ ರೋಬೋಟಿಕ್ ಸರ್ಜರಿ ಮಾಡಲಾಗಿದೆ. ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಅಂಗಾಂಶ ಪುನರ್ನಿರ್ಮಾಣದ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ವಿಶೇಷವೆಂದರೆ ಈ ಸರ್ಜರಿಯಲ್ಲಿ ಮಹಿಳೆಯರ ಸ್ತನಗಳನ್ನು ತೆಗೆದುಹಾಕುವ ಅಗತ್ಯವಿಲ್ಲ.
ಹೆರಿಗೆಯ ನಂತರ 27 ವರ್ಷದ ಮಹಿಳೆಯೊಬ್ಬರು ಸ್ತನದಲ್ಲಿ ಗಡ್ಡೆಯಿರುವುದಾಗಿ ವೈದ್ಯರಿಗೆ ತಿಳಿಸಿದ್ದರು. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಸ್ತನದಲ್ಲಿ ಇಂತಹ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ, ಆದರೆ ಮಹಿಳೆ ತನ್ನ ಸಮಸ್ಯೆಯನ್ನು ನಿರ್ಲಕ್ಷಿಸುತ್ತಲೇ ಇದ್ದಳು. ವೈದ್ಯಕೀಯ ಪರೀಕ್ಷೆಯಲ್ಲಿ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದರ ನಂತರ ಮಹಿಳೆಗೆ ಕಿಮೊಥೆರಪಿ, ಇಮ್ಯುನೊಥೆರಪಿ ಮತ್ತು ನೈಸರ್ಗಿಕ ಪೂರಕಗಳನ್ನು ನೀಡಲಾಯಿತು.
ಕೀಮೋಥೆರಪಿಯು ಗಡ್ಡೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಂಗಾಂಶ ಪುನರ್ನಿರ್ಮಾಣ ಸೇರಿದಂತೆ ಸ್ತನ ಉಳಿಸುವ ಶಸ್ತ್ರಚಿಕಿತ್ಸೆಯನ್ನು ಯಾವುದೇ ತೊಂದರೆಯಿಲ್ಲದೆ ರೋಬೋಟ್ ಸಹಾಯದಿಂದ ಮಾಡಲಾಯಿತು. ಕ್ಯಾನ್ಸರ್ನಿಂದಾಗಿ ತನ್ನ ಎರಡೂ ಸ್ತನಗಳನ್ನು ಕಳೆದುಕೊಳ್ಳುವ ಆತಂಕ ಮಹಿಳೆಗಿತ್ತು. ಆದರೆ ಚಿಕಿತ್ಸೆ ಬಳಿಕ ಮಹಿಳೆ ಮತ್ತೆ ಮಗುವಿಗೆ ಹಾಲುಣಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 60 ವರ್ಷದ ಮಹಿಳೆಯ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ರೋಬೋಟಿಕ್ ತಂತ್ರವನ್ನು ಬಳಸಿ ಮಾಡಲಾಗಿದೆ. ಈಕೆಗೆ ಸ್ತನದಲ್ಲಿ ಮೂರು ಗಡ್ಡೆಗಳು ಬೆಳೆದಿದ್ದವು. ಸರ್ಜರಿ ಬಳಿಕ ಮಹಿಳೆ ಆರೋಗ್ಯವಾಗಿದ್ದಾಳೆ.
ಇದೊಂದು ಅಪರೂಪದ ಶಸ್ತ್ರಚಿಕಿತ್ಸೆಯಾಗಿದ್ದು, ಲ್ಯಾಟಿಸ್ಸಿಮಸ್ ಫ್ಲಾಪ್ ರೀಕನ್ಸ್ಟ್ರಕ್ಷನ್ ಅನ್ನು ಇದರಲ್ಲಿ ಬಳಸಲಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ರೋಬೋಟ್ಗಳ ಬಳಕೆಯಿಂದ ಛಾಯಾಚಿತ್ರಗಳು ಹೆಚ್ಚು ನಿಖರವಾಗುತ್ತವೆ ಮತ್ತು ಛೇದನದ ಗಾತ್ರವು ಕಡಿಮೆಯಾಗುತ್ತದೆ. ರೋಬೋಟ್ ಅನ್ನು ಬದಿಯಿಂದ ಸ್ತನಕ್ಕೆ ಸೇರಿಸಲಾಗುತ್ತದೆ, ಇದು ಅಂಗಾಂಶವನ್ನು ತೆಗೆದುಹಾಕುತ್ತದೆ ಮತ್ತು ಸ್ತನವನ್ನು ಪುನರ್ನಿರ್ಮಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ತನದ ಚರ್ಮಕ್ಕೆ ಸಹ ಹಾನಿಯಾಗುವುದಿಲ್ಲ.
ಅತಿಸಾರ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲೊಂದು. ಬ್ಯಾಕ್ಟೀರಿಯಾ, ವೈರಸ್ ಅಥವಾ ಪರಾವಲಂಬಿ ಸೋಂಕು, ಕಲುಷಿತ ಆಹಾರ, ಪಾನೀಯಗಳು, ಔಷಧಿಗಳ ಸೇವನೆಯಿಂದ ಅತಿಸಾರ ಉಂಟಾಗುತ್ತದೆ. 6 ತಿಂಗಳ ನಂತರ ಮಕ್ಕಳಲ್ಲಿ ಅತಿಸಾರದ ಸಮಸ್ಯೆ ಸ್ವಲ್ಪ ಹೆಚ್ಚಾಗುತ್ತದೆ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳ ಸರಿಯಾದ ಬೆಳವಣಿಗೆಗೆ ತಾಯಿಯ ಹಾಲಿನ ಜೊತೆಗೆ ಪೂರಕ ಆಹಾರಗಳನ್ನು ನೀಡಲು ಆರಂಭಿಸುತ್ತಾರೆ.
ಅತಿಸಾರದ ಸಮಯದಲ್ಲಿ ದೇಹದಲ್ಲಿ ನೀರಿನ ಕೊರತೆಯಾಗುತ್ತದೆ. ಈ ಅವಧಿಯಲ್ಲಿ ಆಹಾರದ ಬಗ್ಗೆ ವಿಶೇಷ ಗಮನ ನೀಡಬೇಕು. ಮಗುವಿಗೆ ಪ್ರತಿದಿನ ಹಾಲು ಕುಡಿಸುತ್ತಿದ್ದರೂ ಅತಿಸಾರದ ಸಮಸ್ಯೆಯಿದ್ದಾಗ ಅದನ್ನು ಕೆಲವು ದಿನಗಳವರೆಗೆ ನಿಲ್ಲಿಸಬೇಕು.
ಅತಿಸಾರದ ಸಮಯದಲ್ಲಿ ಹಾಲು ಕುಡಿಯಬೇಕೇ ಅಥವಾ ಬೇಡವೇ?
ಅತಿಸಾರದ ಸಮಯದಲ್ಲಿ ಹಾಲು ಕುಡಿಯುವುದು ಪ್ರಯೋಜನಕಾರಿಯಲ್ಲ. ಹಾಲು ಲ್ಯಾಕ್ಟೋಸ್ ಎಂಬ ಸಕ್ಕರೆಯನ್ನು ಹೊಂದಿರುತ್ತದೆ, ಇದನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಲ್ಯಾಕ್ಟೋಸ್ ಎಂಬ ಕಿಣ್ವದ ಅಗತ್ಯವಿದೆ. ಅತಿಸಾರದ ಸಮಯದಲ್ಲಿ ಅನೇಕ ಜನರಲ್ಲಿ ಲ್ಯಾಕ್ಟೋಸ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದಾಗಿ ಹಾಲು ಸರಿಯಾಗಿ ಜೀರ್ಣವಾಗುವುದಿಲ್ಲ ಮತ್ತು ಅತಿಸಾರದ ಸಮಸ್ಯೆಯು ಮತ್ತಷ್ಟು ಹೆಚ್ಚಾಗಬಹುದು.
ಹುರಿದ ಆಹಾರಗಳು
ಮಗುವಿಗೆ ಲೂಸ್ ಮೋಶನ್ ಸಮಸ್ಯೆಯಿದ್ದಾಗ ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ನೀಡಬಾರದು. ಈ ಆಹಾರವು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಹಾಳುಮಾಡುತ್ತದೆ.
ಸೊಪ್ಪು-ತರಕಾರಿ
ಎಲೆಕೋಸು, ಹೂಕೋಸು ಮತ್ತು ಕೋಸುಗಡ್ಡೆಯಂತಹ ತರಕಾರಿಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಅತಿಸಾರದ ಸಮಯದಲ್ಲಿ ಇದನ್ನು ಸೇವಿಸಬಾರದು. ಇವುಗಳಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇರುತ್ತದೆ, ಈ ತರಕಾರಿಗಳು ಅತಿಸಾರವನ್ನು ಹೆಚ್ಚಿಸುತ್ತವೆ.
ಬೀನ್ಸ್
ದ್ವಿದಳ ಧಾನ್ಯಗಳು, ಕಿಡ್ನಿ ಬೀನ್ಸ್ ಮುಂತಾದ ದ್ವಿದಳ ಧಾನ್ಯಗಳಲ್ಲೂ ಹೆಚ್ಚಿನ ಪ್ರಮಾಣದ ನಾರಿನಂಶವಿರುತ್ತದೆ. ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಅತಿಸಾರದ ಸಮಯದಲ್ಲಿದ್ದಾಗ ಇದನ್ನು ಸೇವನೆ ಮಾಡುವುದು ಹಾನಿಕಾರಕ.
ಹಣ್ಣು
ಕಿತ್ತಳೆ, ದ್ರಾಕ್ಷಿ ಮತ್ತು ಅನಾನಸ್ನಂತಹ ಕೆಲವು ಹಣ್ಣುಗಳು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತವೆ. ಇವು ಅತಿಸಾರವನ್ನು ಹೆಚ್ಚಿಸುತ್ತವೆ. ಆದರೆ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿರುವುದರಿಂದ ಇದನ್ನು ಲೂಸ್ ಮೋಶನ್ ಇದ್ದಾಗ ಸೇವನೆ ಮಾಡಬಹುದು.
ಕೆಫೀನ್ ಮತ್ತು ಕಾರ್ಬೊನೇಟೆಡ್ ಪಾನೀಯ
ಚಹಾ, ಕಾಫಿ ಮತ್ತು ತಂಪು ಪಾನೀಯಗಳಲ್ಲಿ ಕೆಫೀನ್ ಇರುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ಹೆಚ್ಚುವರಿ ನೀರು ಸಂಗ್ರಹಗೊಳ್ಳುತ್ತದೆ, ಇದು ಅತಿಸಾರವನ್ನು ತೀವ್ರಗೊಳಿಸುತ್ತದೆ.
ಜಂಕ್ ಫುಡ್
ಜಂಕ್ ಫುಡ್, ಸಂಸ್ಕರಿಸಿದ ಆಹಾರ ಮತ್ತು ಸಿಹಿತಿಂಡಿಗಳನ್ನು ಸಹ ಲೂಸ್ ಮೋಶನ್ ಇದ್ದಾಗ ಸೇವನೆ ಮಾಡಬಾರದು. ಇವುಗಳ ಬದಲಾಗಿ ಅತಿಸಾರದ ಸಮಯದಲ್ಲಿ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು.
ಭಾರತದ ಪ್ರಸಿದ್ಧ ಮಸಾಲೆಗಳ ಬ್ರಾಂಡ್ ಎವರೆಸ್ಟ್ ಮತ್ತು ಎಂಡಿಎಚ್ಅನ್ನು ಹಾಂಗ್ಕಾಂಗ್ನಲ್ಲೂ ನಿಷೇಧಿಸಲಾಗಿದೆ. ಈ ಹಿಂದೆ ಈ ಕಂಪನಿಯ ಮಸಾಲೆ ಪದಾರ್ಥಗಳ ಮೇಲೆ ಸಿಂಗಾಪುರದಲ್ಲಿ ನಿಷೇಧ ಹೇರಲಾಗಿತ್ತು. ಅವುಗಳಲ್ಲಿ ಕಾರ್ಸಿನೋಜೆನಿಕ್ ಕೀಟನಾಶಕ ಎಥಿಲೀನ್ ಆಕ್ಸೈಡ್ ಕಂಡುಬಂದಿದೆ ಎಂದು ವರದಿಯಾಗಿದೆ. ಎಥಿಲೀನ್ ಆಕ್ಸೈಡ್ ಪ್ರಮಾಣವು ನಿಗದಿತ ಮಿತಿಗಿಂತ ಹೆಚ್ಚು ಕಂಡುಬಂದ ಹಿನ್ನೆಲೆಯಲ್ಲಿ ಸಿಂಗಾಪುರದಲ್ಲಿ ಎವರೆಸ್ಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
ಬಳಿಕ ಹಾಂಗ್ ಕಾಂಗ್ನಲ್ಲೂ ಇವುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲಿನ ಆಹಾರ ಸುರಕ್ಷತಾ ಕೇಂದ್ರ, MDHನ ಮೂರು ಮಸಾಲೆಗಳಲ್ಲಿ ಎಥಿಲೀನ್ ಆಕ್ಸೈಡ್ ಇರುವುದಾಗಿ ಘೋಷಿಸಿದೆ. ಮದ್ರಾಸ್ ಕರಿ ಪುಡಿ, ಸಾಂಬಾರ್ ಮಸಾಲಾ ಪುಡಿಯಲ್ಲಿ ಅಪಾಯಕಾರಿ ಪದಾರ್ಥಗಳಿರುವುದು ಪತ್ತೆಯಾಗಿದೆ.
ಮೂರು ಚಿಲ್ಲರೆ ಮಾರಾಟ ಮಳಿಗೆಗಳಿಂದ ಮಸಾಲೆಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವುಗಳಲ್ಲಿ ಕೀಟನಾಶಕ ಮತ್ತು ಎಥಿಲೀನ್ ಆಕ್ಸೈಡ್ ಕಂಡುಬಂದಿದೆ ಎಂದು ಪರೀಕ್ಷಾ ಫಲಿತಾಂಶಗಳು ಬಹಿರಂಗಪಡಿಸಿದವು. ಹಾಗಾಗಿ ಈ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲು ಆದೇಶಿಸಲಾಯ್ತು. ಎವರೆಸ್ಟ್ ಕಂಪನಿಯ ಫಿಶ್ ಕರಿ ಮಸಾಲಾದಲ್ಲಿ ಕೀಟನಾಶಕ ಕಂಡುಬಂದಿತ್ತು.
ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ಪ್ರಕಾರ, ಎಥಿಲೀನ್ ಆಕ್ಸೈಡ್ ಗ್ರೂಪ್ 1 ಕಾರ್ಸಿನೋಜೆನ್ ಆಗಿದೆ. ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ. ಇದನ್ನು ಸೇವನೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಅಪಾಯವೂ ಹೆಚ್ಚಾಗುತ್ತದೆ.
ಈ ಮಸಾಲೆಗಳು ಮನುಷ್ಯರ ಬಳಕೆಗೆ ಯೋಗ್ಯವಲ್ಲ ಎಂದು ಸಿಂಗಾಪುರ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಎವರೆಸ್ಟ್ 50 ವರ್ಷಗಳಿಗಿಂತಲೂ ಹೆಚ್ಚು ಇತಿಹಾಸವಿರುವ ಹಳೆಯ ಬ್ರಾಂಡ್. ಎಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳುಹಿಸುವ ಮೊದಲು ಕಾರ್ಖಾನೆಯಲ್ಲಿ ಪರಿಶೀಲಿಸಲಾಗುತ್ತದೆ ಎಂಬುದು ಕಂಪನಿಯ ವಾದ. ನಿಗದಿಪಡಿಸಿದ ಉನ್ನತ ಮಟ್ಟದ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವುದಾಗಿ ಕಂಪನಿ ಹೇಳಿಕೊಂಡಿದೆ.
ಸಾಮಾನ್ಯವಾಗಿ ಕಾಲುಗಳು ಗಲೀಜಾದಾಗ ನಾವು ಕಾಲುಗಳನ್ನು ಚೆನ್ನಾಗಿ ತಿಕ್ಕಿ ತೊಳೆಯುತ್ತೇವೆ. ಆಗ ಕಾಲುಗಳು ಸುಂದರವಾಗಿ ಕಾಣುವುದನ್ನು ನಾವು ಗಮನಿಸಿರುತ್ತೇವೆ. ಆದರೆ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಬಿಸಿನೀರಿನಲ್ಲಿ ತೊಳೆದು ಮಲಗುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
*ಕಾಲುಗಳು ನಮ್ಮ ದೇಹದ ಭಾರವನ್ನು ಹೊತ್ತುಕೊಂಡಿರುವುದರಿಂದ ಕಾಲಿನ ಮೂಳೆಗಳಲ್ಲಿ ಹೆಚ್ಚಾಗಿ ನೋವು ಸೆಳೆತ ಕಂಡು ಬರುತ್ತದೆ. ಆದರೆ ಬಿಸಿ ನೀರಿನಲ್ಲಿ ಕಾಲನ್ನು ತೊಳೆಯುವುದರಿಂದ ಈ ಸೆಳೆತ ನೋವು ಕಡಿಮೆಯಾಗುತ್ತದೆ.
*ಸಾಮಾನ್ಯವಾಗಿ ರಾತ್ರಿ ವೇಳೆ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ. ಈ ಶಾಖವನ್ನು ಹೊರಹಾಕಿ ದೇಹವನ್ನು ತಂಪಾಗಿಸಲು ನಿಮ್ಮ ಕಾಲುಗಳನ್ನು ರಾತ್ರಿ ಬಿಸಿ ನೀರಿನಲ್ಲಿ ವಾಶ್ ಮಾಡಿ ಮಲಗಿ.
*ಕಾಲಿಗೆ ಇಡೀ ದಿನ ಶೂ, ಸಾಕ್ಸ್ ಧರಿಸುವುದರಿಂದ ಕಾಲುಗಳಲ್ಲಿ ವಾಸನೆ ಕಂಡು ಬರುತ್ತದೆ, ಈ ಸಮಸ್ಯೆ ನಿವಾರಣೆಯಾಗಲು ಕಾಲನ್ನು ರಾತ್ರಿ ಬಿಸಿ ನೀರಿನಲ್ಲಿ ತೊಳೆಯಿರಿ.
ಹೃದಯಾಘಾತವು ಪ್ರಪಂಚದಾದ್ಯಂತ ಸಂಭವಿಸುವ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚಿನ ಜನರು ಹೃದಯಾಘಾತವನ್ನು ಹಠಾತ್ ಘಟನೆ ಎಂದುಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಈ ಸಂಪೂರ್ಣ ಪ್ರಕ್ರಿಯೆಯು ಸಂಭವಿಸಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಹೃದಯಾಘಾತದ ಮುನ್ಸೂಚನೆಗಳನ್ನು ಗುರುತಿಸುವ ಮೂಲಕ ಸಾವನ್ನು ತಪ್ಪಿಸಬಹುದು.
ಹೃದಯಾಘಾತದ ಅತ್ಯಂತ ಗಂಭೀರವಾದ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಇವುಗಳಲ್ಲಿ ಪ್ರಮುಖವಾದದ್ದು ಬೆನ್ನಿನ ಮೇಲ್ಭಾಗದಲ್ಲಿ ನೋವು. ಈ ನೋವು ಸಾಮಾನ್ಯವಾಗಿ ಸಂಭವಿಸುವ ಸ್ಥಳಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬಹುದು.
ದವಡೆಯಲ್ಲಿ ನೋವು
ಹೃದಯಾಘಾತ ಸಂಭವಿಸುವ ಹಲವಾರು ದಿನಗಳ ಮೊದಲೇ ದವಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದು ಹೃದಯಾಘಾತದ ಸಮಯದಲ್ಲಿ ದವಡೆಯ ನೋವು ಅಸಹನೀಯವಾಗಬಹುದು.
ಕುತ್ತಿಗೆ ನೋವು
ಹೃದಯಾಘಾತದ ಆರಂಭಿಕ ಲಕ್ಷಣವೆಂದರೆ ಕುತ್ತಿಗೆ ನೋವು. ದೀರ್ಘಕಾಲದವರೆಗೆ ಕುತ್ತಿಗೆ ನೋವನ್ನು ಅನುಭವಿಸುತ್ತಿದ್ದರೆ ಅದನ್ನು ಅಲಕ್ಷಿಸಬೇಡಿ, ಕೂಡಲೇ ವೈದ್ಯರಿಂದ ಪರೀಕ್ಷಿಸಿಕೊಳ್ಳಿ.
ಭುಜದ ನೋವು
ಹೃದಯದಲ್ಲಿ ತೊಂದರೆಯಾದಾಗ ಭುಜದಲ್ಲಿ ಕೂಡ ನೋವು ಕಾಣಿಸಿಕೊಳ್ಳುತ್ತದೆ. ಕಾರಣವಿಲ್ಲದೇ ಭುಜದಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಗುರುತಿಸುವುದು ಮತ್ತು ಪರೀಕ್ಷಿಸಿಕೊಳ್ಳುವುದು ಅವಶ್ಯಕ.
ಬೆನ್ನು ನೋವು
ಹೃದಯಾಘಾತದ ಪ್ರಮುಖ ಲಕ್ಷಣವೆಂದರೆ ದೀರ್ಘಕಾಲದ ಬೆನ್ನು ನೋವು. ಅನೇಕರು ತಪ್ಪಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ಮಲಗುವುದರಿಂದ ಬೆನ್ನುನೋವು ಬಂದಿದೆ ಎಂದುಕೊಳ್ಳುತ್ತಾರೆ. ಆದರೆ ಅನೇಕ ಸಂದರ್ಭಗಳಲ್ಲಿ ಇದು ಹೃದಯಾಘಾತಕ್ಕೆ ಸಂಬಂಧಿಸಿರುತ್ತದೆ.
ಎದೆ ನೋವು
ಎದೆ ನೋವು ಹೃದಯಾಘಾತದ ಸಾಮಾನ್ಯ ಚಿಹ್ನೆ. ಇದು ಹೃದಯಾಘಾತದ ಸಮಯದಲ್ಲಿ ಮಾತ್ರವಲ್ಲದೆ ಅದು ಸಂಭವಿಸುವ ಮೊದಲು ಅನೇಕ ಬಾರಿ ಕಾಣಿಸಿಕೊಳ್ಳುತ್ತದೆ.
ಕೆಲವರಿಗೆ ಪದೇ ಪದೇ ಉಗುರು ಕಚ್ಚುವ ಅಭ್ಯಾಸವಿರುತ್ತದೆ. ಇದರಿಂದ ಉಗುರುಗಳ ಜೊತೆಗೆ ಹಲ್ಲುಗಳಿಗೂ ಹಾನಿಯಾಗುತ್ತದೆ. ಅಲ್ಲದೇ ಉಗುರಿನಲ್ಲಿ ಸೇರಿಕೊಂಡ ಬ್ಯಾಕ್ಟೀರಿಯಾ ದೇಹ ಪ್ರವೆಶಿಸಿ ರೋಗಗಳನ್ನುಂಟುಮಾಡುತ್ತದೆ. ಈ ಅಭ್ಯಾಸವನ್ನು ತೊಡೆದುಹಾಕಲು ಈ ನಿಯಮ ಪಾಲಿಸಿ.
-ಕಾಲಕಾಲಕ್ಕೆ ಉಗುರುಗಳನ್ನು ಕತ್ತರಿಸುತ್ತಿರಿ.
-ನಿಮ್ಮ ಗಮನವನ್ನು ಬೇರೆ ಕಡೆ ಸೆಳೆಯಿರಿ. ಕೈಗಳನ್ನು ಬಳಸಿ ಮಾಡುವಂತಹ ಕೆಲಸದ ಕಡೆಗೆ ಹೆಚ್ಚು ಗಮನಕೊಡಿ.
-ಉಗುರುಗಳಿಗೆ ಅಲಂಕಾರಗಳನ್ನು ಮಾಡಿ ಇದರಿಂದ ಉಗುರು ಕಚ್ಚಲು ಮನಸ್ಸಾಗುವುದಿಲ್ಲ.
– ಕ್ಯಾಲ್ಸಿಯಂ ಕಡಿಮೆಯಾದಾಗ ಕೆಲವರು ಉಗುರು ಕಚ್ಚುತ್ತಾರೆ. ಹಾಗಾಗಿ ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಿ.
-ಉಗುರುಗಳಿಗೆ ಬೇವಿನ ಅಥವಾ ಮೆಣಸಿನ ಪೇಸ್ಟ್ ಹಾಕಿ. ಇದರಿಂದ ಉಗುರು ಕಚ್ಚಲು ಆಗುವುದಿಲ್ಲ.
-ನೀವು ಒತ್ತಡದಿಂದ ಉಗುರು ಕಚ್ಚುತ್ತಿದ್ದರೆ ಕೂಡಲೆ ಒತ್ತಡವನ್ನು ನಿವಾರಿಸಿಕೊಳ್ಳಿ.
ಅನಾನಸ್ ಆರೋಗ್ಯಕ್ಕೆ ಒಳ್ಳೆಯದು. ತೆಂಗಿನಕಾಯಿ ಕೂಡ ಆರೋಗ್ಯಕ್ಕೆ ಒಳ್ಳೆಯದು. ಇವರೆಡನ್ನೂ ಸೇರಿಸಿ ಅನಾನಸ್ ತೆಂಗಿನಕಾಯಿ ಬರ್ಫಿ ಮಾಡಿ. ರುಚಿಯಾದ ಇದನ್ನು ಮಾಡೋದು ಸುಲಭ.
ಅನಾನಸ್ ತೆಂಗಿನಕಾಯಿ ಬರ್ಫಿಗೆ ಬೇಕಾಗುವ ಸಾಮಗ್ರಿ :
ತೆಂಗಿನಕಾಯಿ – 2 ಕಪ್
ಅನಾನಸ್ ಸ್ಲೈಸ್ – 4 ಕಪ್
ತುಪ್ಪ _ ಸ್ವಲ್ಪ
ಸಕ್ಕರೆ – 1 ಕಪ್
ಏಲಕ್ಕಿ ಪುಡಿ – 1 ಚಮಚ
ಅನಾನಸ್ ತೆಂಗಿನಕಾಯಿ ಬರ್ಫಿ ಮಾಡುವ ವಿಧಾನ :
ಒಂದು ನಾನ್ ಸ್ಟಿಕ್ ಪಾತ್ರೆಗೆ ತುಪ್ಪ ಹಾಗೂ ತೆಂಗಿನಕಾಯಿ ತುರಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಇನ್ನೊಂದೆಡೆ ಅನಾನಸ್ ಸ್ಲೈಸ್ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ರುಬ್ಬಿದ ಅನಾನಸನ್ನು ತೆಂಗಿನಕಾಯಿ ತುರಿ ಜೊತೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಏಲಕ್ಕಿ ಪುಡಿ, ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಮಿಶ್ರಣ ಸರಿಯಾಗಿ ಮಿಕ್ಸ್ ಆಗುವವರೆಗೂ ಕೈ ಆಡಿಸಿ. ಬರ್ಫಿ ಹದಕ್ಕೆ ಬರ್ತಿದ್ದಂತೆ ಒಂದು ಪಾತ್ರೆಗೆ ತುಪ್ಪ ಹಾಕಿ ಅದ್ರ ಮೇಲೆ ಮಿಶ್ರಣವನ್ನು ಹಾಕಿ. ಹರಡಿದ ಮಿಶ್ರಣ ತಣ್ಣಗಾದ್ಮೇಲೆ ಕತ್ತರಿಸಿ ಸರ್ವ್ ಮಾಡಿ.
ಕೆಲವರಿಗೆ ಕೆಮ್ಮುವಾಗ, ಶೀನುವಾಗ ಮೂತ್ರ ಸೋರಿಕೆಯಾಗುತ್ತದೆ. ಇದು ಅವರನ್ನು ಮುಜುಗರಕ್ಕೀಡು ಮಾಡುತ್ತದೆ. ಈ ಸಮಸ್ಯೆ ಹೆಚ್ಚಾಗಿ ವೃದ್ದಾಪ್ಯದಲ್ಲಿ ಕಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.
* ಬೆಳಿಗ್ಗೆ ಖರ್ಜೂರವನ್ನು ಸೇವಿಸಿ. ಇದರಲ್ಲಿ ಖನಿಜ ಮತ್ತು ನಾರಿನಾಂಶವಿದೆ. ಇದು ಹೊಟ್ಟೆಯ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಮತ್ತು ದೇಹದಲ್ಲಿನ ಕಬ್ಬಿಣಾಂಶವನ್ನು ಹೆಚ್ಚಿಸುತ್ತದೆ.
* ಮೊಳಕೆ ಕಾಳುಗಳನ್ನು ಸೇವಿಸಿ. ಇದು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
* ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವೇಳೆ 1 ಚಮಚ ತುಪ್ಪ ಸೇವಿಸಿ. ಇದರಿಂದ ನೀವು ಸುಲಭವಾಗಿ ಕೊಬ್ಬಿನಾಮ್ಲಗಳು, ವಿಟಮಿನ್ ಡಿ, ಎ, ಇ, ಕೆ ಪಡೆಯಬಹುದು.
ಸಾಮಾನ್ಯವಾಗಿ ಎಲ್ಲರೂ ಪಾರ್ಲರ್ಗಳಲ್ಲಿ ವ್ಯಾಕ್ಸಿಂಗ್ ಮಾಡಿಸಿಕೊಳ್ಳುತ್ತಾರೆ. ಆದರೆ ಅನೇಕ ಕಾರಣಗಳಿಂದ ಪಾರ್ಲರ್ಗೆ ಹೋಗಲು ಸಮಯ ಸಿಗದೇ ಇದ್ದಾಗ ಮನೆಯಲ್ಲೇ ಪ್ರಯತ್ನಿಸುವವರೂ ಇದ್ದಾರೆ. ಮನೆಯಲ್ಲೇ ವ್ಯಾಕ್ಸಿಂಗ್ ಮಾಡಿಕೊಳ್ಳುವುದರಿಂದ ಹಣ ಕೂಡ ಉಳಿತಾಯ ಮಾಡಬಹುದು. ಆದರೆ ಮನೆಯಲ್ಲಿ ವ್ಯಾಕ್ಸಿಂಗ್ ಮಾಡಿಕೊಳ್ಳುವ ಸಂದರ್ಭದಲ್ಲಿ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಟೆಂಪ್ರೇಚರ್
ವ್ಯಾಕ್ಸಿಂಗ್ ಮಾಡಿಕೊಳ್ಳುವಾಗ ಎಚ್ಚರ ವಹಿಸದೇ ಇದ್ದರೆ ಚರ್ಮಕ್ಕೆ ಹಾನಿಯಾಗಬಹುದು. ಅನಗತ್ಯ ಕೂದಲನ್ನು ತೆಗೆದುಹಾಕಲು ಜನರು ಶೇವಿಂಗ್, ಕೂದಲು ತೆಗೆಯುವ ಕ್ರೀಮ್ ಮತ್ತು ಇತರ ಅನೇಕ ವಸ್ತುಗಳನ್ನು ಬಳಸುತ್ತಾರೆ. ಮನೆಯಲ್ಲಿ ವ್ಯಾಕ್ಸಿಂಗ್ ಮಾಡುವಾಗ ವ್ಯಾಕ್ಸ್ ತಾಪಮಾನವು ಸರಿಯಾಗಿರಬೇಕು. ಇಲ್ಲದಿದ್ದರೆ ಚರ್ಮ ಸುಟ್ಟುಹೋಗಬಹುದು.
ತೆಳುವಾದ ಪದರ
ವ್ಯಾಕ್ಸಿಂಗ್ ಸಮಯದಲ್ಲಿ ಕೆಲವರು ತೆಳುವಾಗಿ ಅದನ್ನು ಅನ್ವಯಿಸುತ್ತಾರೆ, ಈ ರೀತಿ ಮಾಡುವುದರಿಂದ ಕೂದಲನ್ನು ಸಂಪೂರ್ಣವಾಗಿ ತೆಗೆದು ಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಿಸಿಯಾದ ವ್ಯಾಕ್ಸ್ ಅನ್ನು ದಪ್ಪಗೆ ಹಚ್ಚಿಕೊಳ್ಳಬೇಕು.
ಸ್ಟ್ರಿಪ್
ವ್ಯಾಕ್ಸಿಂಗ್ ಮಾಡುವಾಗ ಆಗುವ ನೋವಿನಿಂದ ಎಲ್ಲರೂ ಭಯಪಟ್ಟುಕೊಳ್ಳುತ್ತಾರೆ. ವ್ಯಾಕ್ಸಿಂಗ್ ನೋವನ್ನು ತಪ್ಪಿಸಲು ಸ್ಟ್ರಿಪ್ ಅನ್ನು ತುಂಬಾ ಮೃದುವಾಗಿ ಎಳೆಯಬೇಡಿ. ಹೀಗೆ ಮಾಡುವುದರಿಂದ ಚರ್ಮಕ್ಕೆ ಹಾನಿಯಾಗಬಹುದು, ಕೂದಲನ್ನು ಕೂಡ ಸಂಪೂರ್ಣ ತೆಗೆದುಹಾಕಲು ಸಾಧ್ಯವಾಗುವುದಿಲ್ಲ.
ಗಾಯ
ವ್ಯಾಕ್ಸಿಂಗ್ ಸಮಯದಲ್ಲಿ ಅನೇಕ ತಪ್ಪುಗಳು ಸಂಭವಿಸುತ್ತವೆ, ಇದು ಚರ್ಮವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಗಾಯಗಳ ಮೇಲೆ ವ್ಯಾಕ್ಸ್ ಅನ್ನು ಅನ್ವಯಿಸಬಾರದು. ಆ ಜಾಗದಲ್ಲಿ ವ್ಯಾಕ್ಸಿಂಗ್ ಮಾಡಬಾರದು. ಸ್ಟ್ರಿಪ್ ಅನ್ನು ಎಳೆಯುವಾಗ ಗಾಯಗಳು ಅಥವಾ ಕಡಿತಗಳಿದ್ದರೆ ಅದನ್ನು ಅವಾಯ್ಡ್ ಮಾಡಿ.
ಮಾಯಿಶ್ಚರೈಸರ್
ದೇಹದಿಂದ ಅನಗತ್ಯ ಕೂದಲನ್ನು ತೆಗೆದುಹಾಕುವುದು ಸುಲಭ. ಆದರೆ ವ್ಯಾಕ್ಸಿಂಗ್ ಮಾಡಿದ ನಂತರ ನೀರಿನಿಂದ ತೊಳೆಯಿರಿ ಮತ್ತು ಅದರ ಮೇಲೆ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.
ಈಗ ಎಲ್ಲದಕ್ಕೂ ಬೆಲೆ ಏರಿಕೆ. ಅದೂ ಅಲ್ಲದೇ ಕೆಮಿಕಲ್ ಇಲ್ಲದೇ ಯಾವುದನ್ನೂ ಕೂಡ ಬೆಳೆಸುವುದಿಲ್ಲ. ಹಾಗಾಗಿ ಕೆಲವೊಂದು ತರಕಾರಿಗಳನ್ನು ಮನೆಯಲ್ಲಿಯೇ ನಾವೇ ಬೆಳೆದರೆ ಹಣವೂ ಉಳಿತಾಯವಾಗುತ್ತದೆ. ಆರೋಗ್ಯಕ್ಕೂ ಒಳ್ಳೆಯದು.
ಮನೆಯ ಹಿತ್ತಲಿನಲ್ಲಿ, ಟೆರೇಸ್ ನಲ್ಲಿ ಸುಲಭವಾಗಿ ಟೊಮೆಟೊ ಗಿಡವನ್ನು ಬೆಳೆಸುವುದು ಹೇಗೆ ಎಂಬುದಕ್ಕೆ ಇಲ್ಲಿದೆ ನೋಡಿ ಟಿಪ್ಸ್.
ಒಳ್ಳೆಯ ತಳಿಯ ಟೊಮೆಟೊ ಬೀಜವನ್ನು ಆರಿಸಿ. ನಂತರ ಒಂದು ಪಾಟ್ ಗೆ ಮಣ್ಣು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಇದನ್ನು ಬಿಸಿಲಿನಲ್ಲಿರಿಸಿ. ನಂತರ ಇದಕ್ಕೆ ಸ್ವಲ್ಪ ಸಾವಯವ ಗೊಬ್ಬರ ಹಾಕಿ ಮಿಕ್ಸ್ ಮಾಡಿ ಟೊಮೆಟೊ ಬೀಜವನ್ನು ಹಾಕಿ ಅದರ ಮೇಲೆ ಮಣ್ಣನ್ನು ಉದುರಿಸಿ ನೀರನ್ನು ಚಿಮುಕಿಸಿ. ಬೀಜ ಮೊಳಕೆಯೊಡುವವರೆಗೆ ಪಾಟ್ ಬಿಸಿಲಿನಲ್ಲಿಡಿ. ದಿನ ನೀರನ್ನು ಚಿಮುಕಿಸುವುದನ್ನು ಮರೆಯಬೇಡಿ.
ಇದು ಮೊಳಕೆಯೊಡೆದ ನಂತರ ತಂಪಾದ ಜಾಗದಲ್ಲಿ ಇಡಿ. ಕೆಲವೇ ದಿನಗಳಲ್ಲಿ ಗಿಡದಲ್ಲಿ ಹೂ ಬಿಟ್ಟು ಟೊಮೆಟೊ ಕಾಯಿ ಆಗುವುದಕ್ಕೆ ಶುರುವಾಗುತ್ತದೆ.
ದೇಹದ ಕಾರ್ಯಗಳು ಸರಾಗವಾಗಿ ನಡೆಯಲು ವಿಟಮಿನ್ ಗಳು ಅತ್ಯಗತ್ಯ. ಅದರಲ್ಲಿ ವಿಟಮಿನ್ ಸಿ ದೇಹದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಚರ್ಮ ಮತ್ತು ಕೂದಲಿನ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ಅಲ್ಲದೇ ದೇಹದ ತೂಕ ಇಳಿಸಿಕೊಳ್ಳಲು ಕೂಡ ವಿಟಮಿನ್ ಸಿ ಬಹಳ ಪ್ರಯೋಜನಕಾರಿಯಾಗಿದೆ.
*ವಿಟಮಿನ್ ಸಿ ಕೊಬ್ಬನ್ನು ಸಂಗ್ರಹಿಸುವ ಹಾರ್ಮೋನುಗಳನ್ನು ನಿಯಂತ್ರಿಸುವ ಅಂಶಗಳನ್ನು ಒಳಗೊಂಡಿದೆ. ಹಾಗಾಗಿ ದೇಹದಲ್ಲಿನ ಹಾರ್ಮೋನುಗಳಿಗೆ ವಿಟಮಿನ್ ಸಿ ಬಹಳ ಮುಖ್ಯ ಎನ್ನಲಾಗಿದೆ. ಹಾಗಾಗಿ ನಿಮ್ಮ ಆಹಾರದಲ್ಲಿ ನಿಂಬೆ, ಕಿವಿ, ಆಮ್ಲಾ, ಪಪ್ಪಾಯಿ, ಕ್ಯಾಪ್ಸಿಕಂ, ಸ್ಟ್ರಾಬೆರಿ, ಮೊಸರು ಇತ್ಯಾದಿಗಳನ್ನು ಸೇರಿಸಿಕೊಳ್ಳಿ.
*ವಿಟಮಿನ್ ಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಒತ್ತಡದಿಂದ ನಿಮ್ಮ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದು ಕಡಿಮೆಯಾಗುತ್ತದೆ. ಹಾಗಾಗಿ ಅತಿಯಾಗಿ ಒತ್ತಡಕ್ಕೆ ಒಳಗಾದವರು ನಿಮ್ಮ ಆಹಾರದಲ್ಲಿ ಕಿತ್ತಳೆ, ಪೇರಳೆ, ಕಿವಿ, ಮೊಸಂಬಿ, ಸ್ಟ್ರಾಬೆರಿ, ಪಪ್ಪಾಯಿ, ದಾಳಿಂಬೆ ಇತ್ಯಾದಿಗಳನ್ನು ಸೇರಿಸಿ.
ಹೆಚ್ಚಿನ ಜನರು ಪ್ರತಿದಿನ ಚಹಾ, ಕಾಫಿ ಕುಡಿಯುವುದರ ಮೂಲಕ ದಿನವನ್ನು ಪ್ರಾರಂಭಿಸುತ್ತಾರೆ. ಅವರಿಗೆ ಚಹಾ, ಕಾಫಿ ಕುಡಿಯದಿದ್ದರೆ ಏನೋ ಕಳೆದುಕೊಂಡವರ ಹಾಗೇ ವರ್ತಿಸುತ್ತಾರೆ. ಆದರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯಂತೆ. ಮೊದಲು ಅದರಿಂದಾಗುವ ಕೆಟ್ಟ ಪರಿಣಾಮ ಏನು ಎಂಬುದನ್ನು ತಿಳಿದುಕೊಳ್ಳಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ದೇಹಕ್ಕೆ ಹಾನಿಯುಂಟಾಗುತ್ತದೆ. ಹಾಗೇ ಚಹಾದಿಂದ ಆಮ್ಲ ಉತ್ಪತ್ತಿಯಾಗಿ ವಾಕರಿಕೆ ಬರುತ್ತದೆ.
ಟೀ, ಕಾಫಿ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದಲ್ಲಿ ಕ್ಯಾಲೋರಿ ಕಡಿಮೆಯಾಗಿ, ಇದು ಅತಿಯಾಗಿ ತಿನ್ನಲು ಕಾರಣವಾಗುತ್ತದೆ.
ಇದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುವುದರಿಂದ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ-ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿ ಎದೆಯುರಿಗೆ ಕಾರಣವಾಗುತ್ತದೆ. ಹಾಗೂ ಚಹಾದಲ್ಲಿರುವ ಅಂಶ ದೇಹ ಕಬ್ಬಿಣದ ಸತ್ವವನ್ನು ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
ಮಗು ಹುಟ್ಟಿದ ಕೂಡಲೆ ಅಳುತ್ತದೆ. ಅದು ನಗುವುದು ಯಾವಾಗ ಎಂಬುದು ನಿಮ್ಮ ಪ್ರಶ್ನೆಯೇ. ಕೆಲವು ಮಕ್ಕಳು ನಿದ್ದೆಯಲ್ಲೇ ಮುಖವರಳಿಸಿ ಬೊಚ್ಚು ಬಾಯಿ ತೋರಿಸಿ ನಗುವುದು ನೀವು ಕಂಡಿರಬಹುದು. ಹಾಗಾದರೆ ಇದು ನಿಜವಾದ ನಗುವೇ?
ಮಗು ನಗುವುದು ಸಾಮಾನ್ಯವಾಗಿ ಮೂರು ತಿಂಗಳ ಬಳಿಕವೇ. ಮಗು ನಿಮ್ಮ ಸ್ವರ ಅಥವಾ ಮನೆಯ ಇತರ ಮಕ್ಕಳ ದನಿ ಕೇಳಿ ಮುಖವರಳಿಸಿ ನಕ್ಕಿತೆಂದರೆ ಮಗುವಿನ ದೃಷ್ಟಿ ಸರಿಯಾಗಿದೆ ಮತ್ತು ಸರಿಯಾಗಿ ಬೆಳೆಯುತ್ತಿದೆ ಎಂದರ್ಥ.
ಇದು ಕಡ್ಡಾಯವೇನಲ್ಲ. ಅವಧಿ ಪೂರ್ವದಲ್ಲಿ ಜನಿಸಿದ ಮಕ್ಕಳು ನಗಲು 4-5 ತಿಂಗಳು ತೆಗೆದುಕೊಳ್ಳಬಹುದು. ಇಷ್ಟಾದರೂ ಮಗು ನಿಮ್ಮ ಮುಖ ನೋಡುತ್ತಿಲ್ಲ, ಗುರುತಿಸುತ್ತಿಲ್ಲ, ನಗುತ್ತಿಲ್ಲ ಎಂದಾದರೆ ನೀವು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.
ಮಗು ತನ್ನ ಸಂತೋಷ, ಉತ್ಸಾಹ ಮತ್ತು ಉದ್ವೇಗಗಳನ್ನು ನಗುವಿನ ಮೂಲಕ ವ್ಯಕ್ತಪಡಿಸುತ್ತಾ ತಾನು ಸಾಮಾಜಿಕ ಜೀವಿ ಎಂಬುದನ್ನು ದೃಢಪಡಿಸುತ್ತದೆ. ನಗು-ಅಳುವಿನ ಮೂಲಕ ತನ್ನ ಅಭಿಪ್ರಾಯ ವ್ಯಕ್ತಪಡಿಸುತ್ತದೆ. ಮಗುವಿಗೆ ಕಚಗುಳಿ ಕೊಟ್ಟಾಗ ನಗುವುದು, ದೂರವಾದಾಗ ಅಳುವುದು ಸಹಜ ಕ್ರಿಯೆ. ಹೀಗಾಗಿ ಮಗುವಿನ ಬೆಳವಣಿಗೆಯ ಹಂತಗಳನ್ನು ಗಮನಿಸುತ್ತಿರುವುದು ಬಹಳ ಮುಖ್ಯ.
ಕೆಲವೊಮ್ಮೆ ಪರಿಸ್ಥಿತಿ, ಇತರರ ನಡವಳಿಕೆಯಿಂದ ವಿಪರೀತ ಕೋಪ ಬಂದು ನಡೆಯಬಾರದ ಘಟನೆ ನಡೆದು ಹೋಗುತ್ತದೆ. ನಮ್ಮ ಕೋಪವನ್ನು ಹತೋಟಿಗೆ ತೆಗೆದುಕೊಳ್ಳದಿದ್ದರೆ ಸುಮ್ಮನೆ ನಮ್ಮ ಮನಸ್ಸು ಹಾಳು, ಸಂಬಂಧವೂ ಹಾಳಾಗುವ ಸಾಧ್ಯತೆ ಇರುತ್ತದೆ.
ಕೋಪ ಬಂದಾಗ ಹೇಗೆ ಕಂಟ್ರೋಲ್ ಮಾಡಬೇಕು ಎಂಬುದನ್ನು ನಾವು ತಿಳಿದುಕೊಂಡಿರಬೇಕು. ಆ ಕ್ಷಣಕ್ಕೆ ವ್ಯಕ್ತಿ ಆಡಿದ ಮಾತಿಗೆ ಕೋಪಗೊಂಡು ತಾಳ್ಮೆ ಕಳೆದುಕೊಳ್ಳುವ ಬದಲು ಮಾತಿಗೆ ಮಾತು ಸೇರಿಸದೇ ಸುಮ್ಮನಾಗುವುದು ಒಳ್ಳೆಯದು. ನಮ್ಮ ಸಿಟ್ಟು ತಣಿದ ಮೇಲೆ ಯೋಚಿಸಿದಾಗ ಮನಸ್ಸು ಶಾಂತವಾಗಿರುತ್ತದೆ. ಜಗಳವೂ ಆಗುವುದಿಲ್ಲ.
ಯಾರಾದರೂ ನಿಮ್ಮ ಜತೆ ಜಗಳಕ್ಕೆ ಬಂದರೆ ಆದಷ್ಟು ಆ ಪರಿಸ್ಥಿತಿಗಳನ್ನು ಸುಧಾರಿಸುವುದು ನೋಡಿ. ಇಲ್ಲದಿದ್ದರೆ ಅವರಿಗೆ ಇನ್ನೊಮ್ಮೆ ಮಾತನಾಡೋಣ ಎಂದು ಹೇಳಿ ಸುಮ್ಮನಾಗಿ ಬಿಡಿ. ನಿಮ್ಮ ಮೌನ ಕೂಡ ಕೆಲವೊಮ್ಮೆ ಜಗಳವನ್ನು ತಡೆಯುವಲ್ಲಿ ಸಹಾಯಕವಾಗುತ್ತದೆ.
ತುಂಬಾ ಕೋಪ ಬಂದಾಗ 10 ರಿಂದ 1ರವರೆಗೆ ಮನಸ್ಸಿನಲ್ಲಿ ನಂಬರ್ ಗಳನ್ನು ಎಣಿಸಿ. ಇಲ್ಲದಿದ್ದರೆ ಕಣ್ಣುಮುಚ್ಚಿ ಜೋರಾಗಿ ಉಸಿರು ಎಳೆದುಕೊಳ್ಳಿ. ಆಗ ಕೋಪ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬರುತ್ತದೆ.
ಮಿಲ್ಕ್ ಶೇಕ್ ತುಂಬಾ ರುಚಿಯಾಗಿರುತ್ತೆ. ಹಾಗೆ ಇದನ್ನು ತಯಾರಿಸುವುದು ಕೂಡ ಬಹಳ ಸುಲಭ. ನೀವು ತುಂಬಾ ಬಗೆಯ ಮಿಲ್ಕ್ ಶೇಕ್ ಕುಡಿದಿರುತ್ತೀರಿ. ಇಂದು ನಾವು ನಿಮಗೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಕರ್ಜೂರ ಮತ್ತು ಕಾಫಿ ಮಿಲ್ಕ್ ಶೇಕ್ ಮಾಡೋದು ಹೇಗೆ ಎಂದು ತಿಳಿಸುತ್ತೇವೆ.
ಮಿಲ್ಕ್ ಶೇಕ್ ಮಾಡಲು ಬೇಕಾಗುವ ಪದಾರ್ಧ :
1 ಕಪ್ ಕರ್ಜೂರ
10 ದೊಡ್ಡ ಚಮಚ ಕಾಫಿ ಪೌಡರ್
6 ಕಪ್ ಹಾಲು
5-6 ಏಲಕ್ಕಿ
3 ಚಮಚ ಸಕ್ಕರೆ
¾ ಕಪ್ ತಾಜಾ ಕ್ರೀಂ
ಮಿಲ್ಕ್ ಶೇಕ್ ಮಾಡುವ ವಿಧಾನ :
ಮೊದಲು ಒಂದು ಪಾತ್ರೆಗೆ ನೀರು ಮತ್ತು ಕಾಫಿ ಪೌಡರ್ ಹಾಕಿ ಬಿಸಿ ಮಾಡಿಕೊಳ್ಳಿ.
ನಂತ್ರ ಇದಕ್ಕೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ಸಕ್ಕರೆ ಕರಗುವವರೆಗೂ ಕೈ ಆಡಿಸುತ್ತಿರಿ.
ಗ್ಯಾಸ್ ಬಂದ್ ಮಾಡಿ ಮಿಶ್ರಣ ತಣ್ಣಗಾಗುವವರೆಗೆ ಬದಿಗಿಡಿ.
ಕರ್ಜೂರಕ್ಕೆ ಸ್ವಲ್ಪ ಹಾಲು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕಾಫಿ ಪುಡಿ ಮಿಶ್ರಣ, ಹಾಲು ಹಾಗೂ ಕ್ರೀಂ ಹಾಕಿ. ನಂತ್ರ ಸರಿಯಾಗಿ ಮಿಕ್ಸ್ ಮಾಡಿ. ಇಷ್ಟು ಮಾಡಿದ್ರೆ ಮಿಲ್ಕ್ ಶೇಕ್ ಸಿದ್ಧ.
ಸಿಹಿಯಾದ ಮಾಗಿದ ಮಾವಿನ ಹಣ್ಣುಗಳು ಸುಡು ಬೇಸಿಗೆಯಲ್ಲಿ ಸಿಗುವ ವಿಶೇಷತೆಗಳಲ್ಲೊಂದು. ಮಾಗಿದ ಮಾವಿನ ಹಣ್ಣನ್ನು ಸವಿಯಲು ಎಲ್ಲರೂ ಬೇಸಿಗೆಯನ್ನು ಎದುರು ನೋಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಮಾವಿನ ಹಣ್ಣನ್ನು ತಿನ್ನುವ ಮೊದಲು ಅದನ್ನು ನೀರಿನಲ್ಲಿ ನೆನೆಸಿಡಬೇಕು. ಈ ಬಗ್ಗೆ ಬಹುತೇಕರಿಗೆ ತಿಳಿದಿಲ್ಲ.
ಮಾವನ್ನು ನೀರಿನಲ್ಲಿ ನೆನೆಸುವುದು ಅವಶ್ಯಕ. ಹಣ್ಣುಗಳನ್ನು ತಿನ್ನುವ ಮೊದಲು 1 ರಿಂದ 2 ಗಂಟೆಗಳ ಕಾಲ ಶುದ್ಧ ನೀರಿನಲ್ಲಿ ನೆನೆಸಿಡಲು ತಜ್ಞರು ಶಿಫಾರಸು ಮಾಡುತ್ತಾರೆ. ಆದರೆ ಸಮಯದ ಕೊರತೆಯಿದ್ದರೆ 20-30 ನಿಮಿಷಗಳ ಕಾಲವಾದರೂ ನೀರಿನಲ್ಲಿ ಇಟ್ಟು ನಂತರ ತಿನ್ನಬಹುದು.
ಮಾವಿನ ಹಣ್ಣನ್ನೇಕೆ ನೀರಿನಲ್ಲಿ ನೆನೆಸಬೇಕು?
ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಅದರಲ್ಲಿರುವ ಹೆಚ್ಚುವರಿ ಫೈಟಿಕ್ ಆಮ್ಲವನ್ನು ತೆಗೆದುಹಾಕಬಹುದು. ಇದು ಒಂದು ರೀತಿಯ ವಿರೋಧಿ ಪೋಷಕಾಂಶವಾಗಿದ್ದು, ದೇಹವು ಕಬ್ಬಿಣ, ಸತು, ಕ್ಯಾಲ್ಸಿಯಂ ಮತ್ತು ಖನಿಜಗಳ ಕೊರತೆಗೆ ಕಾರಣವಾಗುವ ಇತರ ಖನಿಜಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.
ನೆನೆಸಿದ ಮಾವಿನ ಹಣ್ಣನ್ನು ತಿನ್ನುವುದರಿಂದ ಮೊಡವೆ, ಚರ್ಮದ ಸಮಸ್ಯೆಗಳು, ತಲೆನೋವು, ಮಲಬದ್ಧತೆ ಮತ್ತು ಇತರ ಕರುಳಿನ ಸಮಸ್ಯೆಗಳನ್ನು ತಡೆಯಬಹುದು. ವಿಶೇಷವಾಗಿ ಮಕ್ಕಳಿಗೆ ಮಾವು ಸೇವನೆಯಿಂದ ಅತಿಸಾರ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನೀರಿನಲ್ಲಿ ನೆನೆಸಿ ಬಳಿಕ ಸೇವನೆ ಮಾಡುವುದರಿಂದ ಈ ಸಮಸ್ಯೆಯನ್ನು ಕೂಡ ತಡೆಯಬಹುದು.
ವಾಕಿಂಗ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಹೊತ್ತು ವಾಕ್ ಮಾಡುವುದು ಮ್ಯಾಜಿಕ್ಗಿಂತ ಕಡಿಮೆಯೇನಿಲ್ಲ. ರಾತ್ರಿ ಮಲಗುವ ಮುನ್ನ ಈ ಅಭ್ಯಾಸವನ್ನು ಅಳವಡಿಸಿಕೊಂಡರೆ ಆರೋಗ್ಯಕ್ಕೆ ಲಾಭವಾಗುತ್ತದೆ.
ನಿದ್ರೆಯಗುಣಮಟ್ಟ ಸುಧಾರಣೆ
ಮಲಗುವ ಮುನ್ನ ಲಘು ನಡಿಗೆ ದೇಹದ ಉಷ್ಣತೆಯನ್ನು ಸ್ವಲ್ಪ ಕಡಿಮೆ ಮಾಡುತ್ತದೆ, ಇದು ಉತ್ತಮ ನಿದ್ರೆಗೆ ಅಗತ್ಯ. ಅಷ್ಟೇ ಅಲ್ಲ ವಾಕಿಂಗ್ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಸುಲಭವಾಗಿ ನಿದ್ರೆ ಬರುವಂತೆ ಮಾಡುತ್ತದೆ.
ಮಾನಸಿಕ ಆರೋಗ್ಯ
ಸಂಜೆ ವಾಕಿಂಗ್ ಮಾಡುವುದರಿಂದ ಒತ್ತಡ ಮತ್ತು ಆತಂಕ ಕಡಿಮೆಯಾಗುತ್ತದೆ. ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಖಿನ್ನತೆಯ ಅಪಾಯವನ್ನು ಸಹ ಕಡಿಮೆ ಮಾಡಬಹುದು.
ತೂಕ ಇಳಿಸಲು ಸಹಾಯಕ
ಮಲಗುವ ಮುನ್ನ ಪ್ರತಿದಿನ ವಾಕ್ ಮಾಡುವುದರಿಂದ ಕ್ಯಾಲೊರಿಗಳನ್ನು ಸುಡಬಹುದು. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ
ನಿಯಮಿತವಾಗಿ ಸಂಜೆ ವಾಕಿಂಗ್ ಮಾಡುವುದರಿಂದ ಹೃದಯದ ಚಟುವಟಿಕೆಯು ನಿಯಮಿತವಾಗುತ್ತದೆ ಮತ್ತು ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ.
ಸ್ನಾಯುಗಳಿಗೆ ಬಲ
ನಡಿಗೆಯು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕೀಲುಗಳನ್ನು ಸಹ ಬಲಪಡಿಸುತ್ತದೆ.
ಸಂಜೆ ವಾಕಿಂಗ್ ಮಾಡುವಾಗ ನೆನಪಿನಲ್ಲಿರಲಿ…
– ರಾತ್ರಿಯ ಊಟ ಮಾಡಿ ಕನಿಷ್ಠ 2 ಗಂಟೆಗಳ ನಂತರ ವಾಕಿಂಗ್ಗೆ ತೆರಳಿ
– ತುಂಬಾ ವೇಗವಾಗಿ ನಡೆಯಬೇಡಿ, ಲಘುವಾಗಿ ನಡೆಯುವುದು ಉತ್ತಮ.
– ಆರಾಮದಾಯಕ ಬಟ್ಟೆ ಮತ್ತು ಬೂಟುಗಳನ್ನು ಧರಿಸಿ.
– ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ, ವಾಕಿಂಗ್ ಹೋಗುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಸಂಜೆಯ ವಾಕಿಂಗ್ ಯಾವುದೇ ವಯಸ್ಸಿನವರು ಮಾಡಬಹುದಾದ ಸುಲಭವಾದ ವ್ಯಾಯಾಮವಾಗಿದೆ. ಇದಕ್ಕೆ ಯಾವುದೇ ವಿಶೇಷ ತಯಾರಿ ಅಥವಾ ಸಲಕರಣೆಗಳ ಅಗತ್ಯವಿರುವುದಿಲ್ಲ.